*ಜಿಪಂ ಸಿಇಒ ರಾಹುಲ್ ಶಿಂಧೆ ರವರಿಂದ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ತುರ್ತು ಸಭೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಜಿಪಂ ಸಿಇಒ ರಾಹುಲ್ ಶಿಂಧೆ ರವರು ಜಿಲ್ಲಾ ಆರೋಗ್ಯ ಇಲಾಖೆಯ ಕಚೇರಿಯಲ್ಲಿ ತುರ್ತು ಸಭೆ ಜರುಗಿಸಿ, ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಸಮಗ್ರ ಪ್ರಗತಿ ಪರಿಶೀಲನೆ ಮಾಡಿದರು.
ಎಲ್ಲ ಆರೋಗ್ಯ ಕಾರ್ಯಕ್ರಮಗಳ ಭೌತಿಕ ಸಂಪನ್ಮೂಲಗಳ ಮತ್ತು ಮಾನವ ಸಂಪನ್ಮೂಲಗಳ ಅಗತ್ಯತೆ ಮತ್ತು ಪೂರೈಕೆ ಬಗ್ಗೆ ಚರ್ಚಿಸಿ, ಪರಿಶೀಲಿಸಿದರು. ಹಾಗೂ ಆರ್ಥಿಕ ಚಟುವಟಿಕೆಗಳ ಕುರಿತು ಅನುಮೋದನೆ ಪಡೆಯುವದರ ಬಗ್ಗೆ ಚರ್ಚೆ ನಡಿಸಿ, ಕಚೇರಿಯ ಕಾಗದ ಪತ್ರಗಳ, ಕಡತಗಳ ಪರಿಶೀಲನೆ ಮಾಡಿ, ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸೂಕ್ತ ಸಲಹೆ ಮತ್ತು ಸೂಚನೆಗಳನ್ನು ನೀಡಿದರು. ಜೊತೆಗೆ ಹಿಂದಿನ ಸಭೆಯಲ್ಲಿ ಚರ್ಚಿಸಿದ ವಿಷಯಗಳ ಅನುಷ್ಠಾನ ಆದುದದರ ಬಗ್ಗೆ ವಿಶ್ಲೇಷಿಸಿದರು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಜಿಪಂ ರಾಹುಲ್ ಶಿಂಧೆ ರವರು ಮಳೆಗಾಲ ಪ್ರಾರಂಭವಾಗಿರುವದರಿಂದ ಮಲೇರಿಯಾ, ಡೆಂಗ್ಯೂ, ರೋಗಗಳ ಹಾವಳಿ ಹೆಚ್ಚಾಗಿದ್ದು, ಜನರು ಡೆಂಗ್ಯೂ ಔಷಧ ಪಡೆದುಕೊಳ್ಳುತ್ತಿದ್ದು ಈ ಬಗ್ಗೆ ಆರೋಗ್ಯ ಇಲಾಖೆಯವರು ಜನರಿಗೆ ದೋಷಪೂರಿತ ಡೆಂಗ್ಯೂ ಔಷಧಿ (ಡೆಂಗ್ಯೂ ರಕ್ಷಕ ಹನಿ) ಗಳನ್ನು ಹಾಕಿಸಿಕೊಳ್ಳದಂತೆ ನೋಡಿಕೊಳ್ಳಬೇಕು. ವೈಜ್ಞಾನಿಕವಾಗಿ ದೃಡಪಟ್ಟ ಔಷಧಿಗಳನ್ನು ಮಾತ್ರ ಒದಗಿಸಲು ಕ್ರಮ ಕೈಕೊಳ್ಳಬೇಕೆಂದು ಮಾನ್ಯರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಕಲಿ ವೈದ್ಯರುಗಳು ಡೆಂಗ್ಯೂ ಔಷಧಿಗಳನ್ನು ಸಾರ್ವಜನಿಕರಿಗೆ ನೀಡದಂತೆ ಕ್ರಮ ವಹಿಸಲು ಆರೋಗ್ಯ ಇಲಾಖೆಯ ಕೆ.ಪಿ.ಎಮ್.ಇ ವಿಭಾಗದವರಿಗೆ ಸೂಚಿಸಿದರು. ಸಾರ್ವಜನಿಕರು ಕೂಡಾ ಈ ಕುರಿತು ನಕಲಿ ಜಾಹಿರಾತುಗಳಿಗೆ ಮಾರುಹೋಗದೇ ವೈಜ್ಞಾನಿಕವಾಗಿ ಸಿದ್ದವಾದ ಡೆಂಗ್ಯೂ ಔಷಧಿಗಳನ್ನು ಪಡೆಯುವಂತೆ ಸಲಹೆ ನೀಡಿದರು.
ಜಿಲ್ಲಾ ಆರೋಗ್ಯ ಕಚೇರಿಯ ಎಲ್ಲ ಆರೋಗ್ಯ ಸಂಸ್ಥೆಗಳ ದುರಸ್ಥಿ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸೂಚಿಸಿದರು.
ಸಾರ್ವಜನಿಕರಿಗೆ ಆರೋಗ್ಯ ದೃಷ್ಠಿಯಿಂದ ಹಮ್ಮಿಕೊಳ್ಳಲಾದ “ಗೃಹ ಆರೋಗ್ಯ–ಮನೆ ಬಾಗಿಲಿಗೆ ಆರೋಗ್ಯ” ಕಾರ್ಯಕ್ರಮದ ಪ್ರಗತಿ ಪರಿಶೀಲನೆ ಮಾಡಿದರು. ಕ್ಷಯರೋಗ ನಿಯಂತ್ರಣಕ್ಕೆ ಹಮ್ಮಿಕೊಂಡ ವಯಸ್ಕರ ಬಿಸಿಜಿ ಕಾರ್ಯಕ್ರಮದ ಪ್ರಗತಿ ಪರಿಶೀಲನೆ ಮಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯ ಸಿಬ್ಬಂದಿಗಳ ಕುಂದು ಕೊರತೆ ಆಲಿಸಿ, ಸಿಬ್ಬಂದಿಗಳ ಸಮಸ್ಯೆಗಳಿಗೆ ಪರಿಹಾರ ನೀಡಿ, ಸಮಸ್ಯೆಗಳನ್ನು ಬಗೆಹರಿಸುವುದಾಗಿ ಮಾನ್ಯರು ಅಧಿಕಾರಿಗಳಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ ಉಪಕಾರ್ಯದರ್ಶಿಗಳು (ಅಭಿವೃದ್ಧಿ) ಶ್ರೀ ಬಸವರಾಜ ಅಡವಿಮಠ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಐ.ಪಿ ಗಡಾದ, ಡಾ. ವಿಶ್ವನಾಥ ಭೋವಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು, ಡಾ. ವಿವೇಕ ಹೊನ್ನಳ್ಳಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು, ಡಾ. ಗೀತಾ ಕಾಂಬಳೆ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿಗಳು, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳಾದ ಡಾ. ಚಾಂದನಿ ದೇವಡಿ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ. ಎಸ್.ಎಸ್ ಸಾಯನ್ನವರ ಮತ್ತು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳುಮ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ಕಚೇರಿಯ ಎಲ್ಲ ಸಿಬ್ಬಂದಿಗಳು ಭಾಗವಹಿಸಿದ್ದರು.